Thursday, December 29, 2011

ಭರವಸೆಯ ಬೆಳಕೆಲ್ಲಿ?

ಜಡಕು ಹಗ್ಗದ ದಾರ ಇವನ ಕಾಲ ಬಿಗಿದಿಹುದು
ಧನ-ದಾಹದ ಹಿಂದೆ ದೇಶ ಹೊರಟಿಹುದು     
ಅನಕ್ಷರಸ್ಥರಿವರ್, ಆಳಸಿಗಳಿವರೆಂದು
ಕಲಿತಾತ ಜರಿಯುತಿರೆ

ಸದ್ದಿರದ ಬಯಲಿನಲಿ ಖಿನ್ನಮನ ಬಾವದಲಿ
ರೈತಬಂಧುವು ತನ್ನ ತಾನರಸುತಿಹನು!?
ತನ್ನ ಹುಡುಗರಿಗೆಲ್ಲ ಹೆಚ್ಚು ಗಳಿಸುವ ಹುಚ್ಚು
ಹಳ್ಳಿ  ಹಳಬರಿಗೆಲ್ಲ. ದಿಕ್ಕೆ ತೋಚದ ಕಾನು

ಸೇನಾನಿಗೆ ದೇಶ ಕಾಯುವ ಕಷ್ಟ
ತುತ್ತನಿಕ್ಕುವ ಚಿಂತೆ ಅನ್ನದಾತನಿಗೆ
ಸೊಕ್ಕಿಮೆರೆಯುವ ಮತ್ತು ಆಳುವಾತನಿಗೆ
ಅಧಿಕಾರ  ಕಾಯಲಿಕ್ಕೆ ಭೃಷ್ಟಾಚಾರ!

Thursday, December 8, 2011

ಸಮ್ರದ್ಧ ಸೌಂದರ್ಯ-ಸಂಪತ್ತೇ ನಮ್ಮವರ ಬದುಕನ್ನು ನರಕವಾಗಿಸಿತೇ?

 ಹೃದಯಾಂತರಾಳದಲಿ ಅಡಗಿರುವ ನೋವುಗಳು
ನೂರುಂಟು ನನ್ನ ನಲ್ಲ!
ಬರಿಯ ನೋವುಗಳಲ್ಲ ಭಯದ ಆತಂಕಗಳು
ಕಾಡುತಿವೆ ನಮ್ಮನೆಲ್ಲಾ!

ನಾವು ಮುಂದಿನ ಪೀಳಿಗೆಗೆ ಏನನ್ನು ಬಿಟ್ಟು ಹೊಗಬೇಕು?

ಎಂದೋ ಬಾಲ್ಯದಲ್ಲಿ ಕೇಳೀದ ಹಾಡು ಆವತ್ತು ನಮ್ಮಲ್ಲಿ ವಿಷಾದ ಬಾವವನ್ನಷ್ಟೇ ಮೂಡಿಸಿತ್ತು. ಆದರೆ ಇಂದಿನ ವಾಸ್ತವ ಅಕ್ಷರಅಕ್ಷಗಳಲ್ಲಿ ಅಸಾಹಯಕ ನೋವು ಸಂಕಷ್ಟ  ವೇದನೆಗಳೆಲ್ಲವೂ ಸುಳಿದಾಡುತ್ತದೆ. ಮತ್ತೆ ಎಲ್ಲವನ್ನೂ ಕಳೆದುಕೊಂಡು ಏನೂ ಮಾಡಲಾಗದ ಬಾವ ಆವರಿಸುತ್ತದೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಗ್ರಾಮಾಂತರ ನಿವಾಸಿಗಳ ಅಳಲು ಇದು. ನಾನು ಬಾಲ್ಯದಿಂದಲೂ ಇಲ್ಲೇ ಬೆಳೆದು ಇಲ್ಲೆ ನೆಲೆಕಂಡುಕೊಂಡವನು. ಹಾಗಾಗಿ ಎಲ್ಲವರಿಗೂ ಇರುವಂತೆ  ಈ ನೆಲದೊಂದಿಗೆ ಅವಿನಾಭಾವ ಸಂಬಂದ.ನನಗೂ ಇದೆ.
ಗಣಿವಿರೋದಿ ಹೋರಾಟದಲ್ಲಿ ಪಾಲ್ಗೊಂಡಾಗ ಈಗಿನ ಕಲ್ಪನೆ ಇದ್ದಿರಲಿಲ್ಲ. ಕೈಗಾ ಅಣುವಿರೋದಿ ಹೋರಾಟ ಸಫಲವೋ ವಿಫಲವೋ ಆದರೆ ಅದರ ಘೋರ ಪರಿಣಾಮಗಳನ್ನು ನಾವಿಂದು ಅನುಭವಿಸುತ್ತಿದ್ದೇವೆ. ಕ್ಯಾನ್ಸರ್ ಗರ್ಭಪಾತ ಜನನ ಮತ್ತು ವಂಶವಾಹಿ ಸಂಬಂದದ ರೋಗಗಳು, ಹುಟ್ಟು ಅಂಗವೈಕಲ್ಯತೆ ಸಾಮಾನ್ಯವಾಗುತ್ತಿವೆ.
ಬೀಗಾರ, ವಜ್ರಳ್ಳಿ, ತಾರಗಾರ, ಕಳಚೆ, ಮಾವಿನಮನೆ, ಬಾಸಲ, ವಾಗಳ್ಳಿ, ಬಾರೆ, ದಬ್ಬೆಸಾಲ ಹಾಗೂ ಕಾರವಾರ ತಾಲೂಕಾ ವ್ಯಾಪ್ತಿಗೆ ಬರುವ ಹರ್ಟುಗಾ, ದೇವಕಾರ ಮುಂತಾದ ಗ್ರಾಮಗಳು  ಅಣುವಿಕಿರಣದ ನೇರ ಪರಿಣಾಮಕ್ಕೆ ತುತ್ತಾಗಿವೆ.ಅಣುವಿಕಿರಣದ ವಿಷಯದಲ್ಲಿ ಸರ್ಕಾರ ಮತ್ತು ಸರ್ಕಾರಿ  ಸಂಸ್ಥಗಳು ಅದೆಷ್ಟೇ ಭರವಸೆ ನೀಡಿದರೂ ಕಣ್ಣೆದುರಿಗಿನ ವಾಸ್ತವ ಭರವಸೆಯ ಮೇಲಿನ ನಂಬಿಕೆಯನ್ನುಳಿಸುವುದಿಲ್ಲ. ಗೌಪ್ಯತೆಯ ಹೆಸರಿನಲ್ಲಿ ಸತ್ಯ ಮರೆಯಾಗುತ್ತಿದೆ ಎನಿಸುತ್ತದೆ.
ಆದರೆ ನಮ್ಮ ನೋವು-ನಷ್ಟ, ಬೇಡಿಕೆ ಆಶಯಗಳಿಗೆ ಏನೂ ಬೆಲೆಯೆಲ್ಲವೆ? ಸರ್ಕಾರ ಎನೇ ಮಾಡಿದರೂ ಅದು ಕಣ್ಣೊರೆಸುವ ತಂತ್ರವಷ್ಟೆ ಎಂದೆನಿಸುತ್ತದೆ.
ನಿಧಾನವಾಗಿ ಈ ಭಾಗದಲ್ಲಿ ತಾಪಮಾನ ಹೆಚ್ಚಾಗುತ್ತಿರುವುದು ಅದೆಷ್ಟೋ ಪ್ರಾಣಿ ಪಕ್ಷಿ ಕೀಟ ಸಂಕುಲಗಳು ಕೆಲವೇ ವರ್ಷಗಳಲ್ಲಿ ಮಾಯವಾಗುತ್ತಿರುವದು ವಾತಾವರಣದಲ್ಲಿನ ವಿಕಿರಣದ ಕಾರಣಕ್ಕಾಗಿಯೋ ಎನೋ.ತಿಳಿದವರು ಸತ್ಯ ಹೇಳಬೇಕು. ಆದರೆ ಬದುಕು ನರಕವಾಗಿರುವದು ಯಾಕೆ?
ಇಲ್ಲಿರುವ ವಿಪುಲವಾದ ಅರಣ್ಯ, ಜಲ, ಪರಿಸರಗಳು ಮಾರಕವಾದವೇ? ಅದಕ್ಕಾಗಿಯೇ ಈ ಪರಿ ಯೋಜನೆಗಳು ಇಲ್ಲಿಗೆ ಬರುತ್ತಿವೆ. ಕಾಳಿ ನದಿ ಇದೇ ಜಿಲ್ಲೆಯಲ್ಲಿ ಹುಟ್ಟಿ ಇದೇ ಜಿಲ್ಲೆಯಲ್ಲಿ ಸಮುದ್ರವನ್ನು ಸೇರುತ್ತದೆ. 162 ಕಿ ಮಿ ಹರಿವಿನ ವ್ಯಾಪ್ತಿಯಲ್ಲಿ ಎಂಟು ಆಣೆಕಟ್ಟುಗಳು ನಿರ್ಮಾಣವಾಗಿವೆ. ಕೈಗಾ ಅಣುವಿದ್ಯುತ್ ಯೋಜನೆ ನೌಕಾನೆಲೆ ಈ ಎಲ್ಲ ಯೋಜನೆಗಳು ಇಲ್ಲಿನ ಜನರಿಗೆ ಅನುಕೂಲತೆಗಳನ್ನು ಒದಗಿಸಿಲ್ಲ. ಬೇಕಾಗಿರುವ ಹುಬ್ಬಳ್ಳಿ-ಅಂಕೋಲಾ ರೈಲುಮಾರ್ಗ ಮಾತ್ರ ನಿರ್ಮಾಣವಾಗುತ್ತಿಲ್ಲ.ಈ ಎಲ್ಲ ಬವಣೆಗಳು ನಮ್ಮ ಬಳಿ ಬಂದಿರುವದು ಇಲ್ಲಿರುವ ಸಂಪತ್ತು ಸಮೃದ್ಧಿಯ ಕಾರಣಕ್ಕಾಗಿಯೇ ಅಲ್ಲವೇ? ಅಷ್ಟೇ ಅಲ್ಲ ಕೃಷಿಯೇ ಒಂದು ಜೀವಮಾನದ ತಪಸ್ಸು ಸಾಧನೆ ಆದಾರವಾಗಿರುವ, ನಮ್ಮ ಬದುಕಿನ ಸುಖ-ಸೌಖ್ಯ, ಆರೋಗ್ಯ ನೆಮ್ಮದಿ ಐಶ್ವರ್ಯೆಗಳೆಲ್ಲವೂ ಅದೇ ಆಗಿತ್ತು. ಇಂತಹ ಯೋಜನೆಗಳಿಂದ ನಮ್ಮ ಬದುಕು ಬಲಿಯಾಗುತ್ತಿರುವುದು  ಯಾರಿಗೂ ಏಕೆ ಮಹತ್ವದ್ದಾಗಿ ಕಾಣಿಸುತ್ತಿಲ್ಲ? 







Tuesday, November 29, 2011


21/11/2011
ಸೋಮವಾರ  

                ನನ್ನ
      ಬದುಕಿನ ಜೀವ                                    



ಟಿಸಿಲು ಬೇರಿನ ಚಿಗುರು
ಹದಿಹೃದಯದ ಕಾವು
ಮಧುರಮನಸಿನ ಬಾವ
ನಮ್ಮ ಉಸಿರಿನ ಜೀವ 

ಹರೆಯದ ಹಸಿವು ದಣಿವು,
ಮುದುಡಿ ಹೋಗುವ ಮೊದಲು,
ಗರಿಗೆದರುವ ಮನವು
ಸ್ಪರ್ಶಿಸಲು ಎಳೆಯ ತೊಗಲು 

ಎಳೆಯ ಮಗುವಿನ ನಗುವು
ದಣಿದ ದೇಹದ ಕಸುವು
ಅರ್ಥವಾಗದ ಮೊಗವು
ಹೊಂಗನಿಸಿನ ಒಲವು 

ಒಲುಮೆ ಚಿಲುಮೆಯ ಬದುಕೆ?
ಚಿಗುರಿ ಅರಳುವ ಕ್ಷಣಕೆ
ಕೇಕೆ ಹಾಕುವ ಬಯಕೆ
ಹುಟ್ಟುವುದು ಯಾಕೆ?

Wednesday, June 8, 2011

ನಾವೆತ್ತ ಹೊರಟಿದ್ದೇವೆ?

   ಭೃಷ್ಟಚಾರವನ್ನು ದೂರಮಾಡಬೇಕೆಂದು ದೇಶದಲ್ಲಿ ನಡೆಯುತ್ತಿರುವ ಆಂದೋಲನ ಬಹುಶಃ ಎಲ್ಲರ ಗಮನಕ್ಕೆ ಬಂದಿರಲೇ ಬೇಕು.
ಅತಿಯಾದ ಮಾಹಿತಿಯಿಂದಾಗಿ ಜನಸಾಮಾನ್ಯರು ಗೊಂದಲಿಕ್ಕಡಾಗುತ್ತಿದ್ದಾರೆನೋ ಎಂಬುದು ನನ್ನ ಅಭಿಪ್ರಾಯ. ಏಕೆಂದರೆ ಬೃಷ್ಟಚಾರ ನಡೆಯುತ್ತಿದೆ, ಮತ್ತು ಯಾವ ರೀತಿ, ಪ್ರಮಾಣಗಳಲ್ಲಿ ನಡೆಯುತ್ತಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಅದಕ್ಕೆ ಪರಿಹಾರ ಏನು?

           ಅದೊಂದು ಅರಿಯದ ಸಾಮಾನ್ಯ ಅದಕ್ಕಾಗಿ ಅಣ್ಣಾ ಹಜಾರೆ ಮತ್ತು ಬಾಬಾ ರಾಮದೇವ ಅವರ ಬೆನ್ನಿಗೆ ನಿಂತಿದ್ದಾರೆ. ಬಹುಶಃ ಅವರ ಸ್ಥಾನದಲ್ಲಿ ಯಾರೇ ಇದ್ದರೂ ಜನ ಅವರ ಬೆನ್ನು ಬೀಳುತ್ತಿದ್ದರೇನೊ. ಮಾದ್ಯಮಗಳು ಪಕ್ಷ ಸಂಘಟನೆಗಳ ಮುಖವಾಣಿಯಾಗಿರುವಾಗ ದೂರದರ್ಶನದಲ್ಲಾಗಲಿ ಪತ್ರಿಕೆಗಳಲ್ಲಾಗಲಿ ವಸ್ತುನಿಷ್ಟ ಮಾಹಿತಿ ದೊರಕುತ್ತಿದೆ ಎಂಬ ವಿಶ್ವಾಸವಿಲ್ಲ.ಆದುದರಿಂದ  ಸತ್ಯಾಗ್ರಹ ದಿಕ್ಕು ತಪ್ಪುತ್ತಿದೆಯೇನೊ!!
ಸಮಾನ್ಯ ಜನರ ಬೆಂಬಲ ಗಳಿಸಿದ ಸತ್ಯಾಗ್ರಹವೊಂದು ರಾಜಕೀಯ ಹಿತಾಸಕ್ತಿಗಳಿಗೆ ಬಲಿಯಾಗುತ್ತಿರುವುದು ನೋವು ತರುವ ವಿಷಯ. ಇಂದು ಪ್ರಾಮಾಣಿಕರಿಗೆ ಸತ್ಯಸಂದರಿಗೆ ಓಟು ನೀಡಬೇಕೆಂಬ ಆಶಯವಿದ್ದರೂ ಅಂತವರು ಚುನಾವಣಾ ಕಣದಲ್ಲಿ ಸಿಗದ ಕಾರಣ ತನ್ನ ವಯಕ್ತಿಕ ಹಿತಾಸಕ್ತಿಯ ಕುರಿತಾಗಿ ಮತದಾರ ಯೋಚಿಸಬೇಕಾಗಿರುವುದು ರಾಜಕೀಯ ಮುಂದಾಳುಗಳ ದೋರಣೆಗಳಿಂದಾಗಿಯೇ ಹೊರತು ಸಾಮಾನ್ಯರ ನಡವಳಿಕೆಯಿಂದಲ್ಲ.
            ಬಾಬಾ ರಾಮದೇವ ಅವರು ಸತ್ಯಾಗ್ರಹಕ್ಕೆ ಕುಳಿತ ಮೇಲೆ ಕೇಂದ್ರ ಸರಕಾರ ನಡೆದುಕೊಂಡ ರೀತಿ ಮತ್ತು ಆ ನಂತರದ ತನಿಖೆಯ ಚಟುವಟಿಕೆಗಳು ಕೇಂದ್ರ ಸರಕಾರದ ಮೇಲೆ ಸಂಶಯ ಪಡಲು ಕಾರಣವಾಗಿದೆ. ಒಂದು ವೇಳ ಬಾಬಾ ಅವರು  ತೆರಿಗೆ ವಂಚಿಸಿದ್ದರೆ ಇಲ್ಲಿಯವರೆಗೆ ಯಾಕೆ ಕೇಂದ್ರ ಸರಕಾರ ಸುಮ್ಮನೆ ಕುಳಿತಿತ್ತು? 
         ಇನ್ನು ಸಂಘ ಪರಿವಾರ  ಬಾಭಾ ರಾಮದೇವ ಅವರನ್ನು ಬೆಂಬಲಿಸಿದೆ ಅನ್ನುವದಕ್ಕಿಂತ ಕೇಂದ್ರ ಸರಕಾರ ಕಪ್ಪು ಹಣವನ್ನು ವಾಪಸ್ ತರುವಲ್ಲಿ ಮತ್ತು ರಾಷ್ಟ್ರೀಯ ಸಂಪತ್ತನ್ನಾಗಿ ಘೋಷಿಸುವಲ್ಲಿ ಇಚ್ಛಾಶಕ್ತಿಯನ್ನು ತೋರಿಸಿಲ್ಲ ಎಂಬುದೇ ಮುಖ್ಯವೆನಿಸುತ್ತದೆ.
   ಒಬ್ಬ ಅಣ್ಣಾ, ಒಬ್ಬ ಬಾಬಾ ವಂಚಕರು ಎನಿಸಬಹುದು. ಆದರೆ ಅವರ ಬೆನ್ನಿಗಿರುವ ಅಸಂಖ್ಯ ಜನರು ಅಮಾಯಕತೆಯಿಂದ ಅವರನ್ನು ಬೆಂಬಲಿಸಿಲ್ಲ. ಭೃಷ್ಟಚಾರದಿಂದ ಬೇಸತ್ತು ಅವರನ್ನು ಬೆಂಬಲಿಸಿದ್ದಾರೆ.
  ಆದುದರಿಂದ ಮಧ್ಯರಾತ್ರಿಯಲ್ಲಿ ನಡೆದ ದೌರ್ಜನ್ಯ ಒಪ್ಪುವಂತಹುದಲ್ಲ. ಸಮಸ್ತ ದೇಶವಾಸಿಗಳ ಆಶಯವನ್ನು ಬದಿಗೊತ್ತಿ ಒಂದು ಸರಕಾರ ಧರ್ಪದಿಂದ ಮುನ್ನಡೆಯುತ್ತದೆ ಎಂದಾದರೆ. ನಮ್ಮ ಸಂವಿಧಾನಿಕ ವ್ಯವಸ್ಥೆ ಎತ್ತ ಹೊರಟಿದೆ ಎಂಬ ಪ್ರಶ್ನೆ ಸಹಜ. 
   ಹಾಗದರೆ ಸಾಮಾನ್ಯರು ಯಾವುದರ ಮೇಲೆ ಭರವಸೆ ಇಡಬೇಕು. ಅಂದಿನ ಉಳಿಗಮಾನ್ಯ ವ್ಯವಸ್ಥೆಗೂ ಇಂದಿನ ಆಡಳಿತ ಶಾಹಿಗೂ ವ್ಯತ್ಯಾಸವೇನುಳಿಯಿತು? 

 

Wednesday, May 25, 2011

ಮಿಲೆನಿಯಮ್ ಮುಷ್ಟಿ ಬಿಚ್ಚಿದಾಗ.........

           ನಾಗೇಶ ಹೆಗಡೆಯವರ "ಇರುವುದೊಂದೇ ಭೂಮಿ" ಪುಸ್ತಕವನ್ನು ಓದಿ ಬಹಳ ದಿನಗಳಾಗಿತ್ತು. ಆ ಪುಸ್ತಕದಲ್ಲಿ ಪರಿಸರ, ನಿಸರ್ಗದ ಕುರಿತಾದ ಅವರ  ಚಿಂತನೆಗಳಿಂದ ಬಹಳ ಪ್ರಭಾವಿತನಾಗಿದ್ದೆ. ಅದಕ್ಕಾಗಿ ಮೊನ್ನೆ ಬೆಂಗಳೂರಿಗೆ ಹೋದಾಗ ಸಪ್ನಾ ಪುಸ್ತಕಾಲಯದಲ್ಲಿ ಅವರ ಪುಸ್ತಕಕ್ಕಾಗಿ ಹುಡುಕಾಡಿದಾಗ  ಸಿಕ್ಕಿದ್ದು "ಮುಷ್ಠಿಯಲ್ಲಿ ಮಿಲೆನಿಯಮ್".  ಇಂತಹುದೊಂದು ಕೃತಿ ಪ್ರಕಟವಾದ ಹತ್ತು ವರ್ಷಗಳ ನಂತರ ಓದಿದೆನಲ್ಲ ಎಂದು ಬೇಸರವಾಯಿತು.
           ಮುಷ್ಠಿಯನ್ನು ಬಿಚ್ಚುತ್ತ ಹೊದಂತೆ ನಮ್ಮ ಕಲ್ಪನೆಯಲ್ಲೂ ಇಲ್ಲದ  ಆದರೆ ಅತ್ಯಂತ ಸರಳವಾದ ವಿಷಯಗಳುತಳಿಯತ್ತ ಹೋಗುತ್ತವೆ. ಹೆಗಡೆಯವರ ಸಾಹಿತ್ಯವಂತೂ ಸರಳ ಸುಂದರವಾದುದು.ಈಡೀ ಕೃತಿಯಲ್ಲಿ ಮೀಲೆನಿಯಮ್ ಗತಿಸುವ ಕ್ಞಣದಲ್ಲಿ ಇರುವ ಸಮಸ್ಯೆಗಳ ಕುರಿತು ಚಂತನೆಗೆ ಹಚ್ಚುತ್ತದೆ.  ಎಲ್ಲಾ ಲೇಖನಗಳು ಕೂಡಾ ಪರಿಸರ ಮತ್ತು ಪರಿಸರ ಸಂಬಂದಿ ವಿಷಯಗಳಿಗೆ ಸಂಬಂದಿಸಿದ್ದರಿಂದ ಆ ಕುರಿತಾದ ನಮ್ಮ ತಿಳುವಳಿಕೆ ವಿಸ್ತರಿಸುತ್ತದೆ.
         ಈ ವಿಷಯಗಳು ಎಷ್ಟು ಗಹನವಾದುದು ಎಂಬುದನ್ನು ಓದಿಯೇ ತಿಳಿದುಕೊಳ್ಳಬೇಕು.ಪರಿಸರದ ಮೇಲಿನ ನಮ್ಮ ಶೋಷಣೆ ಯಾವ ಹಂತವನ್ನು ತಲುಪಿದೆ ಎಂಬುದು ಇಲ್ಲಿ ನೀಡಲಾದ ಅಂಕಿ ಆಂಶಗಳಿಂದ ವೇದ್ಯವಾಗುತ್ತದೆ. "ಈ ಬೂಮಿ ಮತ್ತು ಅದರ ಮೇಲಿನ ಸಂಪನ್ಮೂಲಗಳು ನಾವು ತಾತ ಮುತ್ತಾತರಿಂದ ಪಡೆದಾ ಆಸ್ತಿಯಿಲ್ಲ ಮಕ್ಕಳು ಮೊಮ್ಮಕ್ಕಳಿಂದ ಪಡೆದ ಸಾಲ " ಎಂಬ ಮಾತು ಮಾರ್ಮಿಕವಾದುದು. ಕಾರಣ ಈ ಬೂಮಿಯನ್ನು ಮುಂದಿನ ಪೀಳಿಗೆ ವಾಸಯೋಗ್ಯವಾಗಿರುವಂತೆ ನೋಡಿಕೊಳ್ಳಬೆಕಾದ ಅನಿವಾರ್ಯಅಗತ್ಯತೆ ನಮ್ಮ ಮುಂದಿದೆ.
 ಪುಸ್ತಕವನ್ನು ಓದಿ ಮುಗಿಸಿದಾಗ ಯಾವ ಸಮಸ್ಯಗಳಿಗೂ ಪರಿಹಾರ ಸಿಗದಿದ್ದರೂ ಸಮಸ್ಯೆಯ ಅರಿವು ನಮ್ಮದಾಗಿರುತ್ತದೆ.ಎಲ್ಲಾ ಸಮಸ್ಯೆಗಳಿಗೂ ಎಕೈಕ ಪರಿಹಾರವೆಂದರೆ ಜನಸಂಖ್ಯಾ ನಿಯಂತ್ರಣ ಮತ್ತು ಸಂಪನ್ಮೂಲಗಳ ವಿವೇಚನಾಶೀಲ ಬಳಕೆ.

"ನಾಗರೀಕತೆಯ ಪೂರ್ವ ಸ್ಥೀತಿ ಕಾಡು ಉತ್ತರ ಸ್ಥೀತಿ ಮರಳುಗಾಡು" ಕಾರಣ ಮಾನವ ಈ ಪ್ರಪಂಚದಲ್ಲಿ ಶಾಶ್ವತವಾಗಿ ನೆಲಸಲಾಗದಿದ್ದರೂ ಅವನ ಅಟ್ಟಹಾಸ ಮಾತ್ರ ಅಸಹನೀಯವಾದುದು. ಇಂದಿನ ಎಲ್ಲ ಸಮಸ್ಯೆಗಳಿಗೂ ನಾವೇ ಕಾರಣರಾಗಿದ್ದು ಏನೂ ಮಾಡಲಾರದ ಅಸಾಹಯಕ ಸ್ಥಿತಿ ನಮ್ಮದಾಗಿದೆ
        



Tuesday, May 24, 2011

ಬದಲಾದ ಬದುಕಿನ ಕುರಿತು

ನಿರಂತರ ಕೆಲಸದ ನಡುವೆ ಬದುಕಿನ ಸೌಂದರ್ಯ ಸವಿಯಲು ಪುರುಸೊತ್ತಿಲ್ಲ. ಹಾಗೆನ್ನುವುದೇ ತಪ್ಪು ಎಂದು ನಾನು ನಂಬಿದ ಕಾಲವೊಂದಿತ್ತು. ಆದರೆ ಇಂದು ಹಾಗೆನ್ನುವದು ಯಾಕೆ ಎನ್ನುವದು ಅರ್ಥವಾಗುತ್ತಿದೆ. !!
ನಿಜವಾಗಿ ನನ್ನ ಹವ್ಯಾಸಗಳಲ್ಲಿ ಈಗ ನನ್ನ ಬಳಿಯಿರುವದು ಓದು ಮಾತ್ರ.ಅದು ಕೂಡಾ ವಾರಕ್ಕೊಮ್ಮೆ.!
ಗಾಂಧಿಜಿಯ ಸ್ವಾವಲಂಬನೆಯ ತತ್ತ್ವವನ್ನು ನನ್ನ ಬದುಕಿನಲ್ಲಿ ಪಾಲಿಸಿಕೊಂಡು ಬಂದವ ನಾನು. ನನಗೆ ತಿಳುವಳಿಕೆ ಬಂದಾಗಿಲಿನಿಂದಲೂ ನನ್ನ ಬಟ್ಟೆಯನ್ನು ನಾನೇ ತೊಳೆದುಕೊಳ್ಳುತ್ತಿದ್ದೆ ಆದರೆ ಇತ್ತೀಚೆಗೆ ಅದು ಬೇರೆಯವರ ಕೆಲಸವಾಗಿದೆ.!
ಇತ್ತೀಚಿನ ನನ್ನ ದಿನಚರಿಯೆಂದರೆ ಬೆಳಿಗ್ಗೆ ಏಳು ಗಂಟೆಗೆ ಎದ್ದು ಪ್ರಾತಃವಿಧಿಗಳನ್ನು  ಮುಗಿಸಿಕೊಂಡು ಕೆಲಸಕ್ಕೆ ಹರಡುವುದು ಓಂಭತ್ತು ಗಂಟೆಗೆ. ಮದ್ಯಾಹ್ನ ಒಂದು ಘಂಟೆಯ ಒಳಗಡೆ ಊಟ ಮತ್ತು ಕಿರಿವಿಶ್ರಾಂತಿ ರಾತ್ರಿ ಕೆಲಸ ಮುಗಿಸಿ ಹೊರಡುವಾಗ ಓಂಭತ್ತು ಘಂಟೆ.!! ಬಿಡುವಿಲ್ಲದ ಕೆಲಸದ ಬಗ್ಗೆ ನನಗೆ ಬೇಸರವಿಲ್ಲ ಆದರೆ ನನ್ನ ಕನಿಷ್ಠ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಲಾಗುತ್ತಿಲ್ಲ.

ಇವತ್ತಿನ ಕೆಲಸದ ಸ್ವರೂಪವೇ ಹಾಗೆ.