ಹೃದಯಾಂತರಾಳದಲಿ ಅಡಗಿರುವ ನೋವುಗಳು
ನೂರುಂಟು ನನ್ನ ನಲ್ಲ!
ಬರಿಯ ನೋವುಗಳಲ್ಲ ಭಯದ ಆತಂಕಗಳು
ಕಾಡುತಿವೆ ನಮ್ಮನೆಲ್ಲಾ!
ನಾವು ಮುಂದಿನ ಪೀಳಿಗೆಗೆ ಏನನ್ನು ಬಿಟ್ಟು ಹೊಗಬೇಕು?
ಎಂದೋ ಬಾಲ್ಯದಲ್ಲಿ ಕೇಳೀದ ಹಾಡು ಆವತ್ತು ನಮ್ಮಲ್ಲಿ ವಿಷಾದ ಬಾವವನ್ನಷ್ಟೇ ಮೂಡಿಸಿತ್ತು. ಆದರೆ ಇಂದಿನ ವಾಸ್ತವ ಅಕ್ಷರಅಕ್ಷಗಳಲ್ಲಿ ಅಸಾಹಯಕ ನೋವು ಸಂಕಷ್ಟ ವೇದನೆಗಳೆಲ್ಲವೂ ಸುಳಿದಾಡುತ್ತದೆ. ಮತ್ತೆ ಎಲ್ಲವನ್ನೂ ಕಳೆದುಕೊಂಡು ಏನೂ ಮಾಡಲಾಗದ ಬಾವ ಆವರಿಸುತ್ತದೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಗ್ರಾಮಾಂತರ ನಿವಾಸಿಗಳ ಅಳಲು ಇದು. ನಾನು ಬಾಲ್ಯದಿಂದಲೂ ಇಲ್ಲೇ ಬೆಳೆದು ಇಲ್ಲೆ ನೆಲೆಕಂಡುಕೊಂಡವನು. ಹಾಗಾಗಿ ಎಲ್ಲವರಿಗೂ ಇರುವಂತೆ ಈ ನೆಲದೊಂದಿಗೆ ಅವಿನಾಭಾವ ಸಂಬಂದ.ನನಗೂ ಇದೆ.
ಗಣಿವಿರೋದಿ ಹೋರಾಟದಲ್ಲಿ ಪಾಲ್ಗೊಂಡಾಗ ಈಗಿನ ಕಲ್ಪನೆ ಇದ್ದಿರಲಿಲ್ಲ. ಕೈಗಾ ಅಣುವಿರೋದಿ ಹೋರಾಟ ಸಫಲವೋ ವಿಫಲವೋ ಆದರೆ ಅದರ ಘೋರ ಪರಿಣಾಮಗಳನ್ನು ನಾವಿಂದು ಅನುಭವಿಸುತ್ತಿದ್ದೇವೆ. ಕ್ಯಾನ್ಸರ್ ಗರ್ಭಪಾತ ಜನನ ಮತ್ತು ವಂಶವಾಹಿ ಸಂಬಂದದ ರೋಗಗಳು, ಹುಟ್ಟು ಅಂಗವೈಕಲ್ಯತೆ ಸಾಮಾನ್ಯವಾಗುತ್ತಿವೆ.
ಬೀಗಾರ, ವಜ್ರಳ್ಳಿ, ತಾರಗಾರ, ಕಳಚೆ, ಮಾವಿನಮನೆ, ಬಾಸಲ, ವಾಗಳ್ಳಿ, ಬಾರೆ, ದಬ್ಬೆಸಾಲ ಹಾಗೂ ಕಾರವಾರ ತಾಲೂಕಾ ವ್ಯಾಪ್ತಿಗೆ ಬರುವ ಹರ್ಟುಗಾ, ದೇವಕಾರ ಮುಂತಾದ ಗ್ರಾಮಗಳು ಅಣುವಿಕಿರಣದ ನೇರ ಪರಿಣಾಮಕ್ಕೆ ತುತ್ತಾಗಿವೆ.ಅಣುವಿಕಿರಣದ ವಿಷಯದಲ್ಲಿ ಸರ್ಕಾರ ಮತ್ತು ಸರ್ಕಾರಿ ಸಂಸ್ಥಗಳು ಅದೆಷ್ಟೇ ಭರವಸೆ ನೀಡಿದರೂ ಕಣ್ಣೆದುರಿಗಿನ ವಾಸ್ತವ ಭರವಸೆಯ ಮೇಲಿನ ನಂಬಿಕೆಯನ್ನುಳಿಸುವುದಿಲ್ಲ. ಗೌಪ್ಯತೆಯ ಹೆಸರಿನಲ್ಲಿ ಸತ್ಯ ಮರೆಯಾಗುತ್ತಿದೆ ಎನಿಸುತ್ತದೆ.
ಆದರೆ ನಮ್ಮ ನೋವು-ನಷ್ಟ, ಬೇಡಿಕೆ ಆಶಯಗಳಿಗೆ ಏನೂ ಬೆಲೆಯೆಲ್ಲವೆ? ಸರ್ಕಾರ ಎನೇ ಮಾಡಿದರೂ ಅದು ಕಣ್ಣೊರೆಸುವ ತಂತ್ರವಷ್ಟೆ ಎಂದೆನಿಸುತ್ತದೆ.
ನಿಧಾನವಾಗಿ ಈ ಭಾಗದಲ್ಲಿ ತಾಪಮಾನ ಹೆಚ್ಚಾಗುತ್ತಿರುವುದು ಅದೆಷ್ಟೋ ಪ್ರಾಣಿ ಪಕ್ಷಿ ಕೀಟ ಸಂಕುಲಗಳು ಕೆಲವೇ ವರ್ಷಗಳಲ್ಲಿ ಮಾಯವಾಗುತ್ತಿರುವದು ವಾತಾವರಣದಲ್ಲಿನ ವಿಕಿರಣದ ಕಾರಣಕ್ಕಾಗಿಯೋ ಎನೋ.ತಿಳಿದವರು ಸತ್ಯ ಹೇಳಬೇಕು. ಆದರೆ ಬದುಕು ನರಕವಾಗಿರುವದು ಯಾಕೆ?
ಇಲ್ಲಿರುವ ವಿಪುಲವಾದ ಅರಣ್ಯ, ಜಲ, ಪರಿಸರಗಳು ಮಾರಕವಾದವೇ? ಅದಕ್ಕಾಗಿಯೇ ಈ ಪರಿ ಯೋಜನೆಗಳು ಇಲ್ಲಿಗೆ ಬರುತ್ತಿವೆ. ಕಾಳಿ ನದಿ ಇದೇ ಜಿಲ್ಲೆಯಲ್ಲಿ ಹುಟ್ಟಿ ಇದೇ ಜಿಲ್ಲೆಯಲ್ಲಿ ಸಮುದ್ರವನ್ನು ಸೇರುತ್ತದೆ. 162 ಕಿ ಮಿ ಹರಿವಿನ ವ್ಯಾಪ್ತಿಯಲ್ಲಿ ಎಂಟು ಆಣೆಕಟ್ಟುಗಳು ನಿರ್ಮಾಣವಾಗಿವೆ. ಕೈಗಾ ಅಣುವಿದ್ಯುತ್ ಯೋಜನೆ ನೌಕಾನೆಲೆ ಈ ಎಲ್ಲ ಯೋಜನೆಗಳು ಇಲ್ಲಿನ ಜನರಿಗೆ ಅನುಕೂಲತೆಗಳನ್ನು ಒದಗಿಸಿಲ್ಲ. ಬೇಕಾಗಿರುವ ಹುಬ್ಬಳ್ಳಿ-ಅಂಕೋಲಾ ರೈಲುಮಾರ್ಗ ಮಾತ್ರ ನಿರ್ಮಾಣವಾಗುತ್ತಿಲ್ಲ.ಈ ಎಲ್ಲ ಬವಣೆಗಳು ನಮ್ಮ ಬಳಿ ಬಂದಿರುವದು ಇಲ್ಲಿರುವ ಸಂಪತ್ತು ಸಮೃದ್ಧಿಯ ಕಾರಣಕ್ಕಾಗಿಯೇ ಅಲ್ಲವೇ? ಅಷ್ಟೇ ಅಲ್ಲ ಕೃಷಿಯೇ ಒಂದು ಜೀವಮಾನದ ತಪಸ್ಸು ಸಾಧನೆ ಆದಾರವಾಗಿರುವ, ನಮ್ಮ ಬದುಕಿನ ಸುಖ-ಸೌಖ್ಯ, ಆರೋಗ್ಯ ನೆಮ್ಮದಿ ಐಶ್ವರ್ಯೆಗಳೆಲ್ಲವೂ ಅದೇ ಆಗಿತ್ತು. ಇಂತಹ ಯೋಜನೆಗಳಿಂದ ನಮ್ಮ ಬದುಕು ಬಲಿಯಾಗುತ್ತಿರುವುದು ಯಾರಿಗೂ ಏಕೆ ಮಹತ್ವದ್ದಾಗಿ ಕಾಣಿಸುತ್ತಿಲ್ಲ?